ಕೊಯಮತ್ತೂರು

ತಮಿಳುನಾಡು ರಾಜ್ಯದ ಒಂದು ಜಿಲ್ಲೆ ಮತ್ತು ಆ ಜಿಲ್ಲೆಯ ಮುಖ್ಯಪಟ್ಟಣ, ಕೊಯಮತ್ತೂರು ನಗರ ದಕ್ಷಿಣ ಭಾರತದ ಮುಖ್ಯ ಕೈಗಾರಿಕಾ ಮತ್ತು ವ್ಯಾಪಾರ ಕೇಂದ್ರಗಳಲ್ಲೊಂದು. ಜನಸಂಖ್ಯೆ 3,53,469(1971).

ಉತ್ತರದ ನೀಲಗಿರಿ ಮತ್ತು ದಕ್ಷಿಣದ ಅಣ್ಣಾಮಲೈಗಳ ನಡುವೆ, ಪಾಲಕ್ಕಾಡ್ ಕಣಿವೆಯ ಮುಖದ ಬಳಿಯಲ್ಲಿ, ಹತ್ತಿ ಬೆಳೆಯುವ ಪ್ರದೇಶದ ಅಂಚಿನಲ್ಲಿ ನೆಲಸಿರುವ ಈ ನಗರ ಜವಳಿ ಕೈಗಾರಿಕೆಯ ಕೇಂದ್ರ. ಚರ್ಮ ಹದ ಮಾಡುವುದು, ಸಾಬೂನು ಮತ್ತು ವ್ಯವಸಾಯೋಪಕರಣಗಳ ತಯಾರಿಕೆ, ಕಾಫಿ ಸಂಸ್ಕರಣ ಮತ್ತು ಸಕ್ಕರೆ ಕೈಗಾರಿಕೆಗಳೂ ಇಲ್ಲಿವೆ. ಇದೊಂದು ಶಿಕ್ಷಣ ಕೇಂದ್ರ ಕೂಡ. ಇಲ್ಲಿ ಮದ್ರಾಸು ವಿಶ್ವವಿದ್ಯಾಲಯಕ್ಕೆ ಸೇರಿದ ಒಂದು ಕಾಲೇಜು, ಕೃಷಿ ಕಾಲೇಜು ಮತ್ತು ಅರಣ್ಯಶಾಸ್ತ್ರ ಶಿಕ್ಷಣ ಶಾಲೆ ಇವೆ. ಇದು ದಕ್ಷಿಣ ರೈಲ್ವೆಯ ಒಂದು ಮುಖ್ಯ ಜಂಕ್ಷನ್. ಹಲವು ರಸ್ತೆಗಳು ಇಲ್ಲಿ ಕೂಡುತ್ತವೆ. ಕೊಯಮತ್ತೂರು ನಗರಕ್ಕೆ ಮೂರು ಮೈ. ದೂರದಲ್ಲಿರುವ ಪೆರೂರಿನಲ್ಲಿ ಒಂದು ದೇವಾಲಯವಿದೆ. ಇದರ ಒಂದು ಭಾಗ ಚೋಳರ ಕಾಲದಲ್ಲಿ ನಿರ್ಮಿತವಾದ್ದು.

ಕೊಯಮತ್ತೂರು ಜಿಲ್ಲೆಯ ವಿಸ್ತೀರ್ಣ 6,018 ಚ.ಮೈ. ಜನಸಂಖ್ಯೆ 43,57,373 (1971). ಇದರ ಪಶ್ಚಿಮ, ಉತ್ತರ ಮತ್ತು ದಕ್ಷಿಣದ ಭಾಗಗಳು ಬೆಟ್ಟಗಳಿಂದ ಕೂಡಿವೆ. ಪೂರ್ವಭಾಗದ ನೆಲ ಫಲವತ್ತಾದ್ದು. ಇದರ ಎತ್ತರ ಸಮುದ್ರಮಟ್ಟದಿಂದ 900'. ಇಲ್ಲಿ ಮಳೆ ಕಡಿಮೆ. ವಾತಾವರಣದಲ್ಲಿ ಹೆಚ್ಚು ತೇವ ಇರುವುದಿಲ್ಲ. ಸೆಕೆ ಹೆಚ್ಚು. ಬೇಸಗೆ ತೀವ್ರವಾದಾಗ ಜಿಲ್ಲೆಯ ಸಣ್ಣ ನದಿಗಳು ಬತ್ತಿ ಹೋಗುತ್ತವೆ. ಪಶ್ಚಿಮ ಮತ್ತು ಉತ್ತರದ ಬೆಟ್ಟಗಳಲ್ಲಿ ಕಾಫಿ ಮತ್ತು ಚಹ ತೋಟಗಳಿವೆ. ಮೈದಾನ ಪ್ರದೇಶದಲ್ಲಿ ಭತ್ತ ಮತ್ತು ಹತ್ತಿ ಮುಖ್ಯ ಬೆಳೆಗಳು. ಹಿಂದೆ ಈ ಜಿಲ್ಲೆ ಈಗಿನ ಸೇಲಂ ಜಿಲ್ಲೆಯ ಭಾಗಗಳೊಡನೆ ಕೂಡಿ ಕೊಂಗು ನಾಡು ಎಂದು ಪ್ರಸಿದ್ದವಾಗಿತ್ತು. 9ನೆಯ ಶತಮಾನದಲ್ಲಿ ಈ ಜಿಲ್ಲೆಯ ಭಾಗಗಳು ಚೋಳರಿಗೆ ಸೇರಿದ್ದುವು; 11ನೆಯ ಶತಮಾನದಲ್ಲಿ ಈ ಭಾಗ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. ತರುವಾಯ 14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನವಾಯಿತು. ಹೈದರ್ ಆಲಿ 1761ರಲ್ಲಿ ಈ ನಾಡನ್ನು ಗೆದ್ದುಕೊಂಡ, ಅವನ ಮಗ ಟಿಪ್ಪುಸುಲ್ತಾನ 4ನೆಯ ಮೈಸೂರು ಯುದ್ಧದಲ್ಲಿ (1799) ಮಡಿದ ಮೇಲೆ ಕೊಯಮತ್ತೂರು ಬ್ರಿಟಿಷರ ವಶವಾಗಿ ಮದ್ರಾಸು ಪ್ರಾಂತ್ಯಕ್ಕೆ ಸೇರಿತು. 1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಮೈಸೂರು ರಾಜ್ಯಕ್ಕೆ ವರ್ಗವಾಯಿತು.								(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ